
ಹುಬ್ಬಳ್ಳಿ: ಮಿದುಳಿಗೆ ರಕ್ತ ಪೂರೈಸುವ ಕುತ್ತಿಗೆಯಲ್ಲಿನ ಕೆರೋಟಿಡ್ ಆರ್ಟೆರಿ (Carotid Artery) ಎಂಬ ರಕ್ತನಾಳದಲ್ಲಿನ ಮುಚ್ಚಿದ ಭಾಗ (ಬ್ಲಾಕೇಜ್) ತೆಗೆಯಲು ಕೆರೋಟಿಡ್ ಆರ್ಟೆರಿ ಸ್ಟಂಟಿಂಗ್ (Carotid Artery Stenting) ಎಂಬ ಅತ್ಯಾಧುನಿಕ ವಿಧಾನದ ಚಿಕಿತ್ಸೆ ಮೂಲಕ ರೋಗಿಯೊಬ್ಬರಿಗೆ ಸಂಭವಿಸಬಹುದಾಗಿದ್ದ ಪಾರ್ಶ್ವವಾಯು ಸಮಸ್ಯೆಯಿಂದ ಪಾರು ಮಾಡಿದ ಬಾಲಾಜಿ ಆಸ್ಪತ್ರೆ ವೈದ್ಯರು ರೋಗಿಗೆ ಮರು ಜನ್ಮ ನೀಡಿದ್ದಾರೆ.
ಬಳ್ಳಾರಿ ಮೂಲದ ರೋಗಿಯು ತಮ್ಮ ಪರಿವಾರಡೊಡನೆ ಕೇರಳಂ ಪ್ರವಾಸದಲ್ಲಿದ್ದಾಗ ಏಕಾಏಕಿ ತಲೆ ತಿರುಗಿ ಬಿದ್ದಾಗ ಕೇರಳಂ ನ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಊರಿಗೆ ಮರಳಿದ್ದಾರೆ. ಕೆಲ ದಿನಗಳ ಬಳಿಕ ಪುನಃ ತಲೆ ತಿರುಗಿ ಬಿದ್ದಾಗ ಆತಂಕಗೊಂಡ ಕುಟುಂಬಸ್ಥರು ಬಳ್ಳಾರಿಯ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದ್ದಾರೆ. ಅವರ ಸಲಹೆ ಮೇರೆಗೆ ಸ್ಕ್ಯಾನ್ ಮಾಡಿಸಿದ್ದಾರೆ. ಸ್ಕ್ಯಾನಿಂಗ್ ವರದಿಯಲ್ಲಿ ಮಿದುಳಿಗೆ ರಕ್ತ ಪೂರೈಸುವ ಕುತ್ತಿಗೆ ಬಳಿಯ ಕೆರೋಟಿಡ್ ಆರ್ಟೆರಿ ಎಂಬ ರಕ್ತನಾಳದಲ್ಲಿ ಶೇ. 95ರಷ್ಟು ಬ್ಲಾಕೇಜ್ ಇರುವುದು ಕಂಡು ಬಂದಿದ್ದು, ಹೆಚ್ಚಿನ ಚಿಕಿತ್ಸೆಯ ಸಲಹೆ ನೀಡಿ ತಜ್ಞ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.
ಈ ಚಿಕಿತ್ಸಾ ವರದಿಯೊಂದಿಗೆ ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಗೆ ಬಂದ ಕುಟುಂಬಸ್ಥರು ಡಾ. ಕ್ರಾಂತಿಕಿರಣ (Dr. KranthiKiran) ಅವರನ್ನು ಭೇಟಿಯಾಗಿ ತಮ್ಮ ಮೆಡಿಕಲ್ ಹಿಸ್ಟರಿ (ವೈದ್ಯಕೀಯ ಇತಿಹಾಸ) ವಿವರಿಸಿದ್ದಾರೆ. ರೋಗಿಯ ರೋಗ ಲಕ್ಷಣ, ಸ್ಕ್ಯಾನಿಂಗ್ ಮತ್ತು ಎಂಜಿಯೋಗ್ರಫಿ ವರದಿಯನ್ನು ಪರಿಶೀಲಿಸಿದ ವೈದ್ಯರು ಕುತ್ತಿಗೆಯಲ್ಲಿನ ಕೆರೋಟಿಡ್ ಆರ್ಟೆರಿ ರಕ್ತನಾಳದ ಬ್ಲಾಕೇಜ್ ನಿಂದ ಸಂಭವಿಸಬಹುದಾಗಿದ್ದ ಪಾರ್ಶ್ವವಾಯು ಅಪಾಯದ ಕುರಿತು ಕುಟುಂಬಸ್ಥರಿಗೆ ಮನವರಿಕೆ ಮಾಡಿ ಕೆರೋಟಿಡ್ ಆರ್ಟೆರಿ ಸ್ಟಂಟಿಂಗ್ ಚಿಕಿತ್ಸೆಗೆ ರೋಗಿಯನ್ನು ಸಜ್ಜುಗೊಳಿಸಿದ್ದಾರೆ.
ಮಿದುಳಿನ ಒಂದು ಭಾಗಕ್ಕೆ ರಕ್ತ ಪೂರೈಕೆಯಲ್ಲಿ ಇದ್ದಕ್ಕಿದ್ದಂತೆ ಅಡಚಣೆ ಉಂಟಾದಾಗ, ಮಿದುಳಿನ ಕೋಶಗಳು ಕಾರ್ಯನಿರ್ವಹಿಸಲು ಅಗತ್ಯವಿರುವ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಕಳೆದುಕೊಳ್ಳುವಾಗ ಪಾರ್ಶ್ವವಾಯು ಸಂಭವಿಸುತ್ತದೆ. ಸುಮಾರು ಶೇ. 80ರಷ್ಟು ಪಾರ್ಶ್ವವಾಯುವಿಗೆ ರಕ್ತನಾಳಗಳಲ್ಲಿನ ಬ್ಲಾಕೇಜ್ ಸಮಸ್ಯೆಯೇ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಡಾ. ಕ್ರಾಂತಿಕಿರಣ ಹಾಗೂ ಹೃದ್ರೋಗ ತಜ್ಞ ಡಾ. ನಿತಿನ್ ಕಡಕೋಳ ನೇತೃತ್ವದ ಬಾಲಾಜಿ ಆಸ್ಪತ್ರೆ ತಜ್ಞ ವೈದ್ಯರ ತಂಡ ರೋಗಿಯ ಮೆದುಳಿಗೆ ರಕ್ತ ಸಾಗಿಸುವ ಕುತ್ತಿಗೆ ಬಳಿಯ ಕೆರೋಟಿಡ್ ಆರ್ಟೆರಿ ರಕ್ತನಾಳಗಳಲ್ಲಿ ತುಂಬಿಕೊಂಡಿದ್ದ ಬ್ಲಾಕೇಜ್ ತೆಗೆಯಲು ಕೆರೋಟಿಡ್ ಆರ್ಟೆರಿ ಸ್ಟೆಂಟಿಂಗ್ ಎನ್ನುವ ಅತ್ಯಾಧುನಿಕವಾದ ಚಿಕಿತ್ಸೆ ನೀಡಿ ಕುತ್ತಿಗೆಯಲ್ಲಿ ಸ್ಟಂಟ್ ಅಳವಡಿಸಿದ್ದಾರೆ.

ಕೆರೋಟಿಡ್ ಆರ್ಟೆರಿ ರಕ್ತನಾಳದ ಮುಚ್ಚಿದ ಭಾಗ(ಬ್ಲಾಕೇಜ್) ತೆರೆಯಲು ಸಣ್ಣ ಲೋಹದ ಮೆಶ್ ಟ್ಯೂಬ್ (ಸ್ಟೆಂಟ್) ಬಳಸಲಾಗುತ್ತದೆ. ಸಾಮಾನ್ಯವಾಗಿ ತೊಡೆಯ ಭಾಗದ ರಕ್ತನಾಳದ ಮೂಲಕ ಸಣ್ಣ ಟ್ಯೂಬ್ (ಕ್ಯಾತಟರ್) ಹಾಕಿ ಕುತ್ತಿಗೆಯ ರಕ್ತನಾಳದವರೆಗೆ ತಲುಪಿಸಲಾಗುತ್ತದೆ. ಬಲೂನ್ ಬಳಸಿ ರಕ್ತ ನಾಳವನ್ನು ಹಿಗ್ಗಿಸಿ ಸ್ಟೆಂಟ್ ಅನ್ನು ಶಾಶ್ವತವಾಗಿ ಅಲ್ಲಿಯೇ ಇರುವಂತೆ ಅಳವಡಿಸಲಾಗುತ್ತದೆ. ಇದರಿಂದ ಮೆದುಳಿಗೆ ಸರಿಯಾಗಿ ರಕ್ತ ಪೂರೈಕೆಯಾಗಲು ಮತ್ತು ಪಾರ್ಶ್ವವಾಯು (Stroke) ಸಮಸ್ಯೆ ಉಂಟಾಗದಂತೆ ತಡೆಯಲು ಸಹಾಯ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಶಸ್ತ್ರ ಚಿಕಿತ್ಸೆ ಬಳಿಕ ರೋಗಿಯನ್ನು 1 ದಿನ ತೀವ್ರ ನಿಗಾ ಘಟಕದಲ್ಲಿರಿಸಿ ಆರೈಕೆ ಮಾಡಲಾಯಿತು. ಅವರ ರಕ್ತದೊತ್ತಡ ಜೊತೆಗೆ ಇನ್ನಿತರ ವೈದ್ಯಕೀಯ ಪರಿಸ್ಥಿತಿಗಳನ್ನು ಪರಿಶೀಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಇದೀಗ ರೋಗಿಯು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಪಾರ್ಶ್ವವಾಯುವಿನ ಅಪಾಯದಿಂದ ದೂರ ಮಾಡಿದ್ದಕ್ಕಾಗಿ ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಶಸ್ತ್ರ ಚಿಕಿತ್ಸೆ ಕುರಿತು ಮಾತನಾಡಿದ ಆಸ್ಪತ್ರೆ ಚೇರ್ಮನ್ ಹಾಗೂ ಖ್ಯಾತ ನರರೋಗ ತಜ್ಞ ಡಾ. ಕ್ರಾಂತಿಕಿರಣ ಅವರು, ಯುವ ಮತ್ತು ಮಧ್ಯವಯಸ್ಕರಲ್ಲಿ ಉಂಟಾಗುವ ಪಾರ್ಶ್ವವಾಯುವಿಗೆ ಕುತ್ತಿಗೆಯಲ್ಲಿರುವ ಕೆರೋಟಿಡ್ (carotid) ಅಥವಾ ಕಶೇರುಕ(vertebrate) ರಕ್ತನಾಳದ ಬ್ಲಾಕೇಜ್ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಬ್ಲಾಕೇಜ್ ನಿಂದಾಗಿ ಪದೇ ಪದೇ ತಲೆ ತಿರುಗಿ ಬೀಳುತ್ತಿದ್ದ ರೋಗಿಗೆ ಕೆರೋಟಿಡ್ ಆರ್ಟೆರಿ ಸ್ಟಂಟಿಂಗ್ ಚಿಕಿತ್ಸೆ ಮೂಲಕ ಸಂಭವಿಸಬಹುದಾಗಿದ್ದ ಪಾರ್ಶ್ವವಾಯುವಿನ ಅಪಾಯ ತಪ್ಪಿಸಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
Article by: Mr. Shivakumar I.B (Balaji Hospitals)